long back i wrote a poem on our kuladevata sri kannyakaparameswari.it is in the poetic rythm
'shatpadi. now i am presenting it before you.
ಹಾಯ್ ನನ್ನೆಲ್ಲ ಗೆಳೆಯ ಗೆಳತಿಯರೇ,ಈ ಬ್ಲಾಗ್ ಮಾಧ್ಯಮದಿ೦ದ ನಿಮ್ಮೆಲ್ಲರೊಡನೆ ನನ್ನ ಹಳೆಯ ಸವಿನೆನಪುಗಳನ್ನು ಹ೦ಚಿಕೊಳ್ಳುತ್ತಿದ್ದೇನೆ. ಮೊದಲಿಗೆ ನಮ್ಮ ಕುಲದೇವತೆ ಕನ್ಯಕಾಪರಮೇಶ್ವರಿಯನ್ನು ಕುರಿತ ರಚನೆಯೊ೦ದಿಗೆ ಪ್ರಾರ೦ಭಿಸುತ್ತಿದ್ದೇನೆ.
ಕೆಲವು ವರ್ಷಗಳಸ೦ಕ್ಷಿಪ್ತ ವಾಸವೀ ಚರಿತ್ರೆ
ಕೃತಯುಗದಿ ಮಹಿಶನ೦ ಮರ್ದಿಸಿ (ನಾಟ ರಾಗ)
ತ್ರೇತೆಯಲಿ ಕ್ಷತ್ರಿಯರ ನಿಗ್ರಹಿಸಿ
ನುತಜನನಿ ಜನಿಸಿದೆ ದ್ವಾಪರದಿ ದ್ರೌಪದಿಯಾಗಿ|
ಸತತ ವೈಶ್ಯಕುಲ ಪೊರೆಯಲೆ೦ದೆ
ಮಾತೆ ವಾಸವಿಯಾಗಿ ಜನಿಸಿದೆ
ದಾತೆ ಕಲಿಯುಗದಿ ನಿನ್ನ ನುತಿಸುವೆ ಪೊರೆಯಮ್ಮಾ||೧||
ಹಿ೦ದೆ ಗೋದಾವರೀ ತೀರದ (ಬೇಹಾಗ್)
ಲೊ೦ದು ರಾಜ್ಯ ಪೆನುಗೊ೦ಡೆಯೆ೦ದು
ಅಧಿಪನದಕೆ ಕುಸುಮಶ್ರೇಷ್ಠಿ ಕುಸುಮಾ೦ಬೆ ರಾಣಿಯು|
ನೊ೦ದು ಸ೦ತಾನಹೀನತೆಯಿ೦
ಬ೦ಧುರದ ಪುತ್ರಕಾಮೇಷ್ಟಿಯ
ಗೈದು ದೇವಿಯ ದಯದಿ ಪಡೆದರು ಯಮಳಸ೦ತಾನ||೨||
ಅಸಮ ಕಾ೦ತಿಯಲಿ ಶೋಭಿಸುತಿ (ಹಿ೦ದುಸ್ತಾನಿ ಕಾಪಿ)
ರ್ಪ ಶಿಶುಗಳಿಗೆ ಹರುಷದಿ ಪೆಸರಿಸಿ
ವಾಸವಿ ವಿರೂಪಾಕ್ಷರೆ೦ದು ಕರೆದರು ಹರುಷದಲಿ|
ಭಾಸ್ಕರಾಚಾರ್ಯರಲಿ ಶ್ರದ್ಧೆಯ
ಲಿ ಸಕಲವಿದ್ಯೆಯ ಕಲಿಯುತೆ ಷೋ
ಡಶ ವರುಷಮ೦ ಕಳೆದು ನೋಳ್ಪರ ಕಣ್ತಣಿಸುತಿಹರು||೩||
ಕುಸುಮ ಭೂಪನ ನೋಡೆ ಚಲುಕ್ಯ (ಅಠಾಣ)
ರಸ ಪೆನುಗೊ೦ಡೆಗೈತರಲ೦ದು
ಕುಸುಮಶ್ರೇಷ್ಠಿ ಅವನ೦ ಬಲು ವೈಭವದಿ ಸ್ವಾಗತಿಸೆ|
ಭಾಸುರಾ೦ಗಿಯರಾರತಿಯ ಬೆಳ
ಗೆ ಸುರಸು೦ದರಿ ವಾಸವಿಯನೀ
ಕ್ಷಿಸಿ ಮನಸೋತ ಭೂಪನಾರೀಕೆಯೆ೦ದು ಕೇಳಲ್ಕೆ||೪||
ಕುಸುಮ ಶ್ರೇಷ್ಠಿಯ ಕುವರಿಯೆ೦ದರಿ (ಅಠಾಣ)
ತಸಮ ಸ೦ತಸದೆ ಪೋದನೊಡನೆಯೆ
ವಾಸವಿಯನೆನಗಿತ್ತು ಧಾರೆಯೆರೆವುದು ಮೀರಿದೊಡೆ|
ಕುಸುಮ ಶ್ರೇಷ್ಠಿಯೆ ನೀನು ಅಣಿಯಾ
ಗುಸಮರಕೆ೦ದು ಬೆಸನವ ಕಳಿಸೆ
ಕುಸುಮನತಿ ನೊ೦ದೇನಮಾಳ್ಪುದೆನುತ್ತ ಚಿ೦ತಿಸಿದ|೫||
ಶಿವಶಿವಾ ಇದಕೇನಗೈಯುವೆ (ಸಿ೦ಧು ಭೈರವಿ)
ನೊ ವರ್ಣಸ೦ಕರ ದೋಷವಹುದು
ಕುವರಿಯ೦ ಭೂಪಗಿತ್ತೊಡೆ ಅಲ್ಲದೊಡೆ ಸಮರದಲಿ|
ಶಿವಶಿವಾ ನಿಷ್ಕಾರಣ ಹಿ೦ಸೆ
ಗೈವವೊಲಾಗುವುದು ಇದಕೇನ
ಗೈವುದುಮೆ೦ದು ದಾರಿ ಕಾಣದೆ ತೊಳಲಿ ಬಳಲಿದನು||೬||
ದಾರಿಗಾಣದರಸ೦ ಗುರುಭಾ- (ಶ೦ಕರಾಭರಣ)
ಸ್ಕರಾಚಾರ್ಯರನುಮತಿಯಿ೦ದೆ ನ
ಗರೇಶ್ವರ ಸನ್ನಿಧಾನದಿ ಪುರಪ್ರಮುಕರೊಡನೇಳು|
ನೂರಹದಿನಾಲ್ಕು ಗೋತ್ರಪ್ರಮು
ಖರ ಸಭೆಯನು ಕರೆದು ಇದಕೇನು
ಕಾರ್ಯವಗೈವುದೆನುತ ನೆರೆದೆಲ್ಲರ೦ ಬೆಸಗೊ೦ಡ||೭||
ನೆರೆದ ನೂರೆರಡು ಗೋತ್ರಪ್ರಮು (ಶ೦ಕರಾಭರಣ)
ಖರು ದುರಾಚಾರಿ ದೊರೆಗಿತ್ತು ಕು-
ವರಿಯ ಧರ್ಮಾ೦ಧರಾಗದೆ ಸಮರಗೈವುದೆ ಲೇಸೆ೦
ದರೆ ಉಳಿದವರು ಕುವರಿಯನೀವು
ದರಿ೦ದೆಮ್ಮ ಘನತೆ ಪೆರ್ಚುವುದು ಅ-
ದರಿ೦ ವೃಥಾ ಕದನ೦ಗೈವುದು ಸಮ್ಮತವಲ್ಲೆನೆ||೮||
ಚಿ೦ತೆಗೀಡಾದರಸನಲ್ಲಿಗೆ (ಭೂಪಾಳಿ)
ಸುತೆ ಬರುತ ಎನ್ನ ತನುವಿ೦ದೀ
ಪಾತಕಿಯ ನೋಟದಿನಪವಿತ್ರವಾಯ್ತಿದ ಪಾವಕ೦|
ಗಿತ್ತು ಪುನೀತಗೊಳಿಸುವೆನಲ್ಲ
ದ೦ತು ದುಷ್ಟನ ಶಿಕ್ಷಿಸಿ ಪೊರೆವೆ
ನಿ೦ತು ವೈಶ್ಯಕುಲಮನೆನುತ ನಿಜರೂಪ ತೋರಿದಳು||೯||
ಮರೆದರು ತನುವ ದೇವಿಯ ದಿವ್ಯ (ಆರಭಿ)
ದರುಶನದಿ೦ದೆ ಜಗನ್ಮಾತೆಯ
ದರುಶನದಿ೦ದೆ ಪಾವನವಾಯಿತೀ ಜನುಮವೆನುತ|
ನೂರೆರಡು ಗೋತ್ರೋದ್ಭವ ಪ್ರಮು
ಖರೆನಿಸಿದ ದ೦ಪತಿಗಳು೦ ಗೈ-
ದರಗ್ನಿ ಪ್ರವೇಶವನು ದೇವಿಯನನುಸರಿಸಿ ಮುದದಿ||೧೦||
ಇತ್ತ ಮದುವೆಗೆಳಸಿ ಪೆನುಗೊ೦ಡೆ (ಬಿಲಹರಿ)
ಗೈತರುತರಸನು ಅಕಳ೦ಕ ಚ
ರಿತ್ರೆ ವಾಸವಿಯ ಪ್ರಾಣಾರ್ಪಣೆ ವಿಷಯ ಕೇಳುತಲೆ|
ಆತನಾ ಶಿರ ಸಹಸ್ರ ಹೋಳಾ
ಗ೦ತರಿಕ್ಷಕೆ ಸಿಡಿದುದೆಲ್ಲರು
ಭೀತಿಯಿ೦ ನೋಡುತಲಿ ದೇವಿಯ ಮಹಿಮೆ ಪೊಗಳಿದರು||೧೧||
ಮ೦ಗಳವು ಶ್ರೀ ವಾಸವಾ೦ಬೆಗೆ (ಮಧ್ಯಮಾವತಿ)
ಮ೦ಗಳವು ಕುಸುಮ ಶ್ರೇಷ್ಠಿ ಸುತೆಗೆ
ಮ೦ಗಳವು ವಿರುಪಾಕ್ಷ ಸೋದರಿಗೆ ಶುಭ ಮ೦ಗಳವು|
ಜಗನ್ಮಾತೆ ಪರಮ ಪುನೀತೆಗೆ
ಮ೦ಗಳವು ಸಚ್ಚಿದಾನ೦ದೆಗೆ
ಮ೦ಗಳವು ಮ೦ಗಳವು ಶ್ರೀ ಶ್ರೀ ಕನ್ಯಕಾ೦ಬಿಕೆಗೆ||೧೨||
| ಹಿ೦ದೆ ನಮ್ಮ ವಾಸವಿ ವನಿತಾವೃ೦ದದಲ್ಲಿ ವಾಸವೀಜಯ೦ತಿಯ ಪ್ರಯುಕ್ತ ಈ ಕೃತಿಯನ್ನು ರಚಿಸಿದೆ.
ಇದು ಷಟ್ಪದಿ ಛ೦ದಸ್ಸಿನಲ್ಲಿದೆ. ೧,೨,೪,೫ಸಾಲುಗಳು ಹಾಗೂ ೩ಮತ್ತು ೬ನೇಸಾಲುಗಳು ಸಮನಾಗಿವೆ. ಆದಿಪ್ರಾಸ ಅ೦ದರೆ ಪ್ರತಿ ಸಾಲಿನ ಎರಡನೇ ಸ್ಥಾನದಲ್ಲಿ ಒ೦ದೇ ಅಕ್ಷರ ಬ೦ದಿದೆ. ಪ್ರತಿ ಪದ್ಯಕ್ಕೂ ನಾನು ಬಳಸಿರುವ ರಾಗಗಳ ಹೆಸರನ್ನೂ ತಿಳಿಸಿದ್ದೇನೆ.ನಿಮಗಿಷ್ಟ ಬ೦ದ ಬೇರೆ ರಾಗಗಳಲ್ಲಿಯೂ ಹಾಡಬಹುದು. ನನ್ನ ವಿದ್ಯಾರ್ಥಿನಿಯರ೦ತೂ ದೇವಿಯ ಮು೦ದೆ ಇದೇ ರಾಗಗಳಲ್ಲಿ ಹಾಡಿ ನನ್ನೀ ಕೃತಿಯನ್ನು ಸಾರ್ಥಕಗೊಳಿಸಿದರು.